'ಗಡಿಯಲ್ಲಿ ಮತ್ತೇನೋ ನಡೆದಿದೆ. ಅದನ್ನು ಈಗ ಬಹಿರಂಗಪಡಿವುದಿಲ್ಲ'- ಹೀಗೆ ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೇನಾ ಪಡೆ ದಾಳಿ ನಡೆಸಿರುವ ಸುಳಿವು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ಸಮೀಪ ಬಿಎಸ್ಎಫ್ ಯೋಧ ನರೇಂದ್ರ ಸಿಂಗ್ ಅವರನ್ನು ಪಾಕಿಸ್ತಾನ ಪಡೆಗಳು ಅಮಾನುಷವಾಗಿ ಹಿಂಸಿಸಿ ಹತ್ಯೆ ಮಾಡಿದ ಘಟನೆಯನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್, 'ಏನೋ ನಡೆದಿದೆ. ಅದನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ. ತುಸು ದೊಡ್ಡದೇ ಏನೋ ನಡೆದಿದೆ. ನನ್ನನ್ನು ನಂಬಿ, ಎರಡು ಮೂರು ದಿನಗಳ ಹಿಂದೆ ಯಾವುದೋ ದೊಡ್ಡ ಘಟನೆ ನಡೆದಿದೆ. ಮತ್ತು ಭವಿಷ್ಯದಲ್ಲಿ ಏನು ನಡೆಯಲಿದೆ ಎಂಬುದನ್ನು ನೀವೂ ನೋಡಲಿದ್ದೀರಿ' ಎಂದು ಹೇಳಿದ್ದಾರೆ.
ಗಡಿಯಲ್ಲಿ ಭಾರಿ ಪ್ರಮಾಣದ ಶೆಲ್ ದಾಳಿ ನಡೆದಿದ್ದು, ಪಾಕಿಸ್ತಾನದ ಸೇನೆ ತೀವ್ರ ಸಾವು ನೋವು ಅನುಭವಿಸಿದೆ ಎಂದು ಬಿಎಸ್ಎಫ್ ಮೂಲಗಳು ದೃಢಪಡಿಸಿವೆ.
'ಪಾಕಿಸ್ತಾನ ನಮ್ಮ ನೆರೆಯ ದೇಶವಾಗಿರುವುದರಿಂದ ನಾವು ಮೊದಲ ಬುಲೆಟ್ಅನ್ನು ಹಾರಿಸಬಾರದು ಎಂದು ಬಿಎಸ್ಎಫ್ ಯೋಧರಿಗೆ ನಾನು ಹೇಳಿದ್ದೆ. ಆದರೆ, ಗುಂಡಿನ ದಾಳಿ ನಡೆದಿದ್ದು ಗಡಿಯಾಚೆಯಿಂದ. ಹೀಗಾಗಿ ಅವರಿಗೆ ಅಷ್ಟೇ ತೀವ್ರವಾಗಿ ಹೊಡೆಯಿರಿ. ಹಾರಿಸುವ ಗುಂಡಿನ ಲೆಕ್ಕ ಇರಿಸಬೇಡಿ ಎಂದು ಸೂಚಿಸಿದ್ದೆ' ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ಅನ್ನು ನೆನಪಿಸಿಕೊಂಡಿರುವ ರಾಜನಾಥ್, ';ಪ್ರಧಾನಿ ಅಂದು ಪ್ರದರ್ಶಿಸಿದ ಗಟ್ಟಿಯಾದ ಸ್ಥೈರ್ಯವನ್ನು ನಾನು ಸ್ಮರಿಸಿಕೊಳ್ಳುತ್ತೇನೆ. ವೈರಿಗಳ ಪ್ರದೇಶದೊಳಗೆ ನುಗ್ಗಿ ಮುಲಾಜಿಲ್ಲದೆ ಹೊಡೆಯಿರಿ ಎಂದು ಸೇನೆ ಮತ್ತು ನಮ್ಮ ಸೈನಿಕರಿಗೆ ಅವಕಾಶ ನೀಡಿದರು. ಇಡೀ ದಾಳಿಯಲ್ಲಿ ನಮ್ಮ ಒಬ್ಬರೇ ಒಬ್ಬ ಕಮಾಂಡೋ ಗಾಯಗೊಳ್ಳಲಿಲ್ಲ' ಎಂದಿದ್ದಾರೆ.
ಸೆಪ್ಟೆಂಬರ್ 18ರಂದು ರಾಮಗಡ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಬೆಳೆದಿದ್ದ ಹುಲ್ಲನ್ನು ಕತ್ತರಿಸಲು ಹೋಗಿದ್ದ ಬಿಎಸ್ಎಫ್ ಯೋಧ ನರೇಂದ್ರ ಸಿಂಗ್ ಅವರ ಮೇಲೆ ಗುಂಡು ಹಾರಿಸಿದ್ದ ಪಾಕ್ ಪಡೆಗಳು ಅವರ ಮೃತದೇಹವನ್ನು ಗಡಿಯೊಳಗೆ ಎಳೆದುಕೊಂಡು ಕತ್ತು ಸೀಳಿದ್ದವು. ಅವರ ಎದೆಯಲ್ಲಿ ಮೂರು ಬುಲೆಟ್ಗಳು ಹೊಕ್ಕಿದ್ದವು. ಬಳಿಕ ಅವರ ಮೃತದೇಹವನ್ನು ಭಾರತದ ಭಾಗಕ್ಕೆ ಎಸೆಯಲಾಗಿತ್ತು.
Comments
Post a Comment